ಭಾರತ ಸರ್ಕಾರದ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯನ್ನು ಕರ್ನಾಟಕ ರಾಜ್ಯದಲ್ಲಿ ದಿನಾಂಕ. 01.12.2018 ರಿಂದ ಅನ್ವಯವಾಗುವಂತೆ ಫೆಬ್ರವರಿ 2019 ರಿಂದ ಅನುಷ್ಠಾನಗೊಳಿಸಲಾಗುತ್ತಿದೆ. ಸದರಿ ಯೋಜನೆಯಡಿ ರೈತರಿಗೆ ಕೃಷಿ ಚಟುವಟಿಕೆಯಲ್ಲಿ ಉತ್ತಮ ಪರಿಕರಗಳನ್ನು ಬಳಸಿ ಬೆಳೆಗಳ ಆರೋಗ್ಯ ನಿರ್ವಹಣೆ ಹಾಗು ಹೆಚ್ಚಿನ ಇಳುವರಿ ಪಡೆದು ನಿರೀಕ್ಷಿತ ಆದಾಯ ಗಳಿಸಲು ನೆರವಾಗುವ ಉದ್ದೇಶದಿಂದ ಸಾಗುವಳಿ ಭೂಮಿ ಹೊಂದಿರುವ (01.02.2019 ರಳೊಳಗಾಗಿ ಸ್ವಾಧೀನದಲ್ಲಿರುವ /ಭೂದಾಖಲೆಯಲ್ಲಿ ಹೆಸರಿರುವ) ಎಲ್ಲಾ ಅರ್ಹ ರೈತ ಕುಟುಂಬ (ಒಂದು ಕುಟುಂಬ ಎಂದರೆ ಗಂಡ, ಹೆಂಡತಿ ಮತ್ತು ಅಪ್ರಾಪ್ತ ಮಕ್ಕಳು)ಕ್ಕೆ ವಾರ್ಷಿಕ ರೂ.6000/-ಗಳ ಆರ್ಥಿಕ ನೆರವನ್ನು ನೀಡಲಾಗುತ್ತಿದೆ. ಸದರಿ ನೆರವನ್ನು ರೂ.2000/-ಗಳಂತೆ ಮೂರು ಕಂತುಗಳಲ್ಲಿ ನಾಲ್ಕು ತಿಂಗಳಿಗೊಮ್ಮೆ ನೀಡಲಾಗುವುದು.